Tuesday, February 28, 2012

ಅಖಿಲ ಭಾರತ ಕಾರ್ಮಿಕ ಸಂಘಗಳ ಐತಿಹಾಸಿಕ ಜಂಟಿ ಮುಷ್ಕರ



ಅಖಿಲ ಭಾರತ ಕಾರ್ಮಿಕ ಸಂಘಗಳ ಐತಿಹಾಸಿಕ ಜಂಟಿ ಮುಷ್ಕರ

ಫೆಬ್ರವರಿ ೨೮ನೆ ತಾರೀಕಿನಂದು ಕರೆ ಕೊಡಲಾಗಿದ್ದ ಅಖಿಲ ಭಾರತ ಕಾರ್ಮಿಕ ಸಂಘಗಳ ಒಕ್ಕೂಟದ ಮುಷ್ಕರದನ್ವಯ ಹಾವೇರಿ ವಿಭಾಗದಲ್ಲಿ ವಿನೂತನವಾಗಿ ಮುಷ್ಕರವನ್ನು ಆಚರಿಸಲಾಯಿತು.

ಹಾವೇರಿ ಪ್ರಧಾನ ಅಂಚೆ ಕಚೇರಿ, ವಿಭಾಗೀಯ ಕಚೇರಿ ಸೇರಿದಂತೆ ಹಾವೇರಿ ವಿಭಾಗದ ಎಲ್ಲ ಅಂಚೆ ಕಛೇರಿಗಳ ಸಮಸ್ತ ಸಿಬ್ಬಂದಿ ತಮ್ಮ ಎಡ ತೋಳಿಗೆ ಕಪ್ಪು ಪಟ್ಟಿ ಧರಿಸುವ ಮೂಲಕ ಮುಷ್ಕರಕ್ಕೆ ಸಾಂಕೇತಿಕವಾಗಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಖಾಸಗೀಕರಣ ಮತ್ತು ಹೊರಗುತ್ತಿಗೆ ನೀತಿಯ ವಿರುದ್ಧ ಕರೆ ಕೊಡಲಾಗಿದ್ದ ಮುಷ್ಕರದಲ್ಲಿ ಮೂಲಭೂತ  ಕಾರ್ಮಿಕ ನೀತಿಯ ಜಾರಿ, ಸಾಮಾಜಿಕ ಭದ್ರತಾ ವ್ಯವಸ್ಥೆ, ಕನಿಷ್ಠ ವೇತನ ವ್ಯವಸ್ಥೆ ಜಾರಿ, ಬೋನಸ್ ಮಿತಿಯ ಏಕರೂಪತೆ ಜಾರಿ, ವಾಗ್ದಾನಿತ ಪಿಂಚಣಿ ವ್ಯವಸ್ಥೆ ಜಾರಿ ಅಲ್ಲದೆ ಇನ್ನಿತರೇ ಕಾರ್ಮಿಕ ಹಿತರಕ್ಷಣ ಬೇಡಿಕೆಗಳನ್ನೋಳಗೊಂಡಿತ್ತು.

ಅಂಚೆ ಇಲಾಖೆಗೆ ಸಂಬಂಧಪಟ್ಟಂತೆ NFPE , FNPO , AIPEDEU ಮತ್ತು NUGDS ಕಾರ್ಮಿಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಭಾರತದಾದ್ಯಂತ ಲಕ್ಷಕ್ಕೂ ಹೆಚ್ಚು ಅಂಚೆ ನೌಕರರು, RMS ಸಿಬ್ಬಂದಿ ಮತ್ತು ಗ್ರಾಮೀಣ ಅಂಚೆ ಸೇವಕರು ಭಾಗವಹಿಸಿದ್ದ ಮುಷ್ಕರದಲ್ಲಿ, ಸಾರ್ವಜನಿಕರಿಗೆ ಎಳ್ಳಷ್ಟೂ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಿದ್ದಲ್ಲದೇ ಕಪ್ಪು ಪಟ್ಟಿ ಧರಿಸುವ ಮೂಲಕ ಮುಷ್ಕರಕ್ಕೆ ಸಂಪೂರ್ಣ ಬೆಂಬಲವನ್ನೂ ವ್ಯಕ್ತಪಡಿಸಿದ ಹಾವೇರಿ ಅಂಚೆ ವಿಭಾಗದ ಸಿಬ್ಬಂದಿಯ ವಿನೂತನ ಪ್ರತಿಭಟನೆ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಯಿತು.

ಹಾವೇರಿ ವಿಭಾಗದ AIPEU ಮತ್ತು NUPE ಸಂಘಗಳ ಮುಖಂಡರಾದ ಶ್ರೀ J C ಜಯರಾಂ ನಾಯಕ್, ಶ್ರೀ R M ಕಾಯಕದ, ಶ್ರೀ B D ಈಳಿಗೇರ್ ಮತ್ತು ಶ್ರೀ D B ಮೂಲಿಮನಿ ಪ್ರತಿಭಟನೆಯ ಮುಂದಾಳತ್ವವನ್ನು ವಹಿಸಿದ್ದರು. ಶಾಂತಿಯುತವಾಗಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ ಹಾವೇರಿ ವಿಭಾಗದ ಸಮಸ್ತ ಅಂಚೆ ಸಿಬ್ಬಂದಿಗೆ ಧನ್ಯವಾದವನ್ನು ಅರ್ಪಿಸುವದರೊಂದಿಗೆ ಮುಷ್ಕರವನ್ನು ಅಂತ್ಯಗೊಳಿಸಲಾಯಿತು.
Share and Care

0 comments:

Twitter Delicious Facebook Digg Stumbleupon Favorites More

 
Design by Free WordPress Themes | Bloggerized by Lasantha - Premium Blogger Themes | Facebook Themes